ಘನಶ್ಯಾಮ
ಘನಶ್ಯಾಮ ಇವನೊಬ್ಬ ಅದಮ್ಯ ಮಗು, ಓರ್ವ ಪ್ರೇಮಮಯಿ ತುಂಟ, ಮೋಹಕ ಕೊಳಲು ವಾದಕ, ಸುಲಲಿತ ನಾಟ್ಯಗಾರ, ಓರ್ವ ಆಕರ್ಷಕ ಪ್ರೇಮಿ, ಓರ್ವ ನೈಜ ವೀರಯೋಧ, ತನ್ನ ಶತ್ರುಗಳ ಪಾಲಿನ ನಿರ್ದಯ ಪರಾಕ್ರಮಿ, ಪ್ರತಿಯೊಂದು ಮನೆಯಲ್ಲೂ ಒಂದು ಭಗ್ನ ಹೃದಯವನ್ನು ಉಳಿಸಿ ಹೋದ ಪುರುಷ, ಒಬ್ಬ ಚತುರ ರಾಜ, ರಾಜನೀತಿಜ್ಞ, ಓರ್ವ ಪರಿಪೂರ್ಣ ಸಜ್ಜನ, ಒಬ್ಬ ಅತ್ಯುನ್ನತ ಸ್ಥರದ ಯೋಗಿ ಮತ್ತು ದೈವದ ಅತ್ಯಂತ ವರ್ಣಮಯ ಅವತಾರವಾಗಿದ್ದಾನೆ.
ಹೆಸರು ಒಂದೇ ಸಾಕಲ್ಲವೇ ನೆಮ್ಮದಿ ಸಿಗಲು, ಅವನೊಬ್ಬ ಸಾಕಲ್ಲವೇ ಬದುಕನ್ನು ಸುಂದರಗೊಳಿಸಲು ಕೃಷ್ಣನೆಡೆಗೆ ಭಕ್ತಿಗಿಂತಲೂ ಸದರವೇ ಹೆಚ್ಚು, ಸದರಕ್ಕೆ ಒಗ್ಗುವ ವೈವಿಧ್ಯತೆಯುಳ್ಳವನು ಆತ. ಹದಿಹರೆಯದವರಿಗೆ ಇನಿಯ, ಕಿರಿಯರಿಗೆ ಸಖ, ಮಕ್ಕಳಿಗೆ ಆಪ್ತ, ತಾಯಂದಿರಿಗೆ ತುಂಟ ಮಗ, ಶ್ರಮಿಕರಿಗೆ ಕರ್ಮಪಾಠ ಹೇಳುವ ವೇದಾಂತಿ, ಹಿರಿಯರಿಗೆ ಜಗದ್ಗುರು ಎಳೆಯವರಿಂದ ಹಿರಿಯರವರೆಗೂ ಅವರವರ ಮನಸ್ಥಿತಿಗೆ ಭಕ್ತಿಯ ರೂಪಕ್ಕೆ ತಕ್ಕಂತೆ ಒಲಿಯುವವ.
ಶುದ್ಧ ಭಕ್ತಿಗೆ ಒಲಿಯುವ ದೇವರು ಹೌದು. ಹೆಚ್ಚಾಗಿ ಶುದ್ಧ ಮನಸ್ಸಿಗೆ, ಚಾರಿತ್ರಕ್ಕೆ, ವ್ಯಕ್ತಿತ್ವಕ್ಕೆ, ಸ್ವಾರ್ಥವಿಲ್ಲದೆ ನಿಸ್ವಾರ್ಥತೆಯಿಂದ ಬೇಡುವ ಪ್ರತಿಯೊಬ್ಬರಿಗೂ ನಿರಾಯಸವಾಗಿ ಸಿಗುವ ಒಬ್ಬ ಆತ್ಮೀಯ ಗೆಳೆಯ..
ಮಾಧವನ ಹಲವಾರು ಮಾತುಗಳು ನನ್ನಲ್ಲಿ ಯಾವಾಗಲೂ ಧನಾತ್ಮಕತೆಯನ್ನು ಇಮ್ಮಡಿಗೊಳಿಸುತ್ತದೆ ಅತಿ ಕಷ್ಟದ ಸಮಯದಲ್ಲಿ ಬದುಕೆ ಮುಗಿಯಿತು ಎಂದಾಗ “ಈ ಸಮಯ ಬದಲಾಗುತ್ತದೆ” ಎಂಬ ಮಾತನ್ನು ಕೇಳಿಸಿ ಬದುಕಿನ ಬಗ್ಗೆ ಭರವಸೆ ಮೂಡಿಸಿದನು, ಕಷ್ಟದಲ್ಲಿದ್ದಾಗ ಈ ಕಷ್ಟ ಶಾಶ್ವತವಲ್ಲ ಎಂದು, ಸುಖದಲ್ಲಿ ಇದ್ದಾಗ ತೇಲಾಡಬೇಡ ಈ ಸುಖವು ಶಾಶ್ವತವಲ್ಲ ಎಂದು ಹೇಳಿಕೊಟ್ಟ ವಾಕ್ಯವದು..
“ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ” ಈ ವಾಕ್ಯವು ನೀನು ನಿನ್ನ ಕೆಲಸವನ್ನು ಮಾಡು ಫಲಾಫಲ ನನಗೆ ಬಿಟ್ಟಿದ್ದು ಎಂಬುದನ್ನು ತಿಳಿಸುತ್ತದೆ. ಬೇವಿನ ಬೀಜ ಹಾಕಿ ಮಾವಿನ ಸಿಹಿ ನಿರೀಕ್ಷಿಸಲಾಗುವುದಿಲ್ಲ ನಾವು ಒಳ್ಳೆಯದನ್ನು ಮಾಡಿದರೆ ಒಳ್ಳೆಯ ಫಲವೇ, ಕೆಟ್ಟದನ್ನು ಮಾಡಿದರೆ ಕೆಟ್ಟ ಫಲವೇ ಸಿಗುತ್ತದೆ. ಅದರಂತೆ ಮಾಡಿದ ಕರ್ಮಫಲ ನಾವು ಮಾಡಿದ್ದಕ್ಕಿಂತ ದುಪ್ಪಟ್ಟಾಗಿಯೇ ನಮಗೆ ಸಿಗುತ್ತದೆ.
ನನ್ನಲ್ಲಿನ ಕೃಷ್ಣ ಎಂದಿಗೂ ವಿಗ್ರಹ ರೂಪ ಪಡೆದೇ ಇಲ್ಲ, ದೇವಸ್ಥಾನಗಳಿಗೆ ಹೋಗಿ ಪೂಜಿಸುವ ಕೈಮುಗಿಯುವ ಯಾವ ಆಚರಣೆಯು ನನ್ನಲಿಲ್ಲ. ಅವನ ಹೆಸರೇ ಸಾಕು ಅವನನ್ನು ಭಜಿಸಲು, ನವಿಲಿನ ಗರಿಯೊಂದೇ ಸಾಕು ಅವನನ್ನು ಪೂಜಿಸಲು, ಧನಾತ್ಮಕತೆ ಸಾಕು ಅವನನ್ನು ಆರಾಧಿಸಲು, ಒಳ್ಳೆಯದನ್ನು ಬಯಸುವುದೇ ಸಾಕು ಅವನನ್ನು ಒಲಿಸಿಕೊಳ್ಳಲು. ಎಲ್ಲಾ ಸಮಯದಲ್ಲೂ ನನ್ನನ್ನು ಕೈ ಹಿಡಿದು ನಡೆಸುವನು, ಬದುಕಿನ ಏಳುಬೀಳಿನಲ್ಲಿ ಜೊತೆ ನಿಂತವನು “ಕಷ್ಟದಲ್ಲಿ ಸಹಭಾಗಿ, ಸುಖದಲ್ಲಿ ಪೂರ್ಣತ್ವ ಕೊಟ್ಟವನು”.
ಜೀವನದ ಪ್ರತಿ ತಿರುವಿನಲ್ಲೂ ತನ್ನ ನಿಲುವನ್ನು ಯಾವುದಾದರೂ ಸುಳಿವಿನ ಮೂಲಕ ನೀಡಿ…. ನನಗೆಂದೇ ಉತ್ತಮವಾದ ದಾರಿಯನ್ನು ಪ್ರತಿ ಸಲವು ನೀಡಿದ್ದಾನೆ….ನನ್ನೊಂದಿಗಿರುವ ಎಲ್ಲವೂ ಅವನು ನೀಡಿರುವ ಅತ್ಯುನ್ನತ ಉಡುಗೊರೆಯಾಗಿದೆ…
ನಿನ್ನನ್ನು ಮಗುವೆಂದು ಮುದ್ದಿಸಲೇ…
ರಾಧೆಯ ಕೃಷ್ಣನೆಂದು ಪ್ರೀತಿಸಲೇ….
ಅರ್ಜುನನ ಸಾರಥಿ ಎಂದು ಗೌರವಿಸಲೇ….
ಭಗವದ್ಗೀತೆಯ ಆಧಾರವೆಂದು ಪೂಜಿಸಲೇ…
ಧರ್ಮದ ಹರಿಕಾರನೆಂದು ಆರಾಧಿಸಲೇ..
ನಾನೇನು ಮಾಡಲಿ ಕೃಷ್ಣ ನೀ ನನ್ನ ಸರ್ವಸ್ವವೂ ಆಗಿರುವೇ 🙏