ಯುಗಾದಿ: ಹೊಸ ಯುಗದ ಆರಂಭ
ಪೂರ್ಣ ಚೇತನ ಶಾಲೆಯ ವತಿಯಿಂದ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
ಬದುಕು ಬೇವು ಬೆಲ್ಲದಂತೆ ಸುಖವೂ ಇರುತ್ತದೆ, ದುಃಖವೂ ಇರುತ್ತದೆ ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಬಾಳ್ವೆನಡೆಸಬೇಕು… ಈ ಯುಗಾದಿ ನಿಮ್ಮ ಜೀವನದ ಕಹಿ ದೂರಮಾಡಲಿ, ಸಿಹಿ ಹೆಚ್ಚಿಸಲಿ.
(ಯುಗಾದಿ ಹಬ್ಬದಂದು ಬೇವು ಬೆಲ್ಲ ತಿನ್ನುವಾಗ ಹೇಳುವ ಸ್ತೋತ್ರ)
ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
(ಅರ್ಥ: ನೂರು ವರ್ಷ ಆಯುಸ್ಸು, ವಜ್ರದಂತೆ ಬಲಿಷ್ಠ ಶರೀರ, ಸರ್ವ ಸಂಪತ್ತು ಮತ್ತು ಕಷ್ಟಗಳ ನಿವಾರಣೆಗೆ ಬೇವು–ಬೆಲ್ಲ ಸೇವನೆ.)
ಪ್ರಕೃತಿಯ ಹೊಸ ಕಾವ್ಯ
ಮಂಜಿನ ಹನಿಗಳ ಮೆಲುಕು ಮೆಲ್ಲಗೆ ಹತ್ತಿರ ಬರುತ್ತಿರುವ ವಸಂತವನ್ನು ಮುನ್ಸೂಚಿಸುತ್ತಿವೆ. ಹಕ್ಕಿಗಳ ಕಲರವ, ಹಸಿರು ಚಿಗುರುಗಳ ಬೆಳವಣಿಗೆ, ತೋಟಗಳಲ್ಲಿ ಮಲ್ಲಿಗೆಯ ಪರಿಮಳ— ಈ ಎಲ್ಲ ಅಂಶಗಳು ಪುನರುಜ್ಜೀವನದ ವಾತಾವರಣವನ್ನು ನಿರ್ಮಿಸುತ್ತಿವೆ. ಮಾವಿನ ಮರದ ಕೊಂಬೆಗಳ ನಡುವೆ ಚಿಗುರಿದ ಹಸಿರು ಎಲೆಗಳು ಹೊಸ ಯುಗದ ಮುನ್ಸೂಚನೆ ನೀಡುತ್ತಿದ್ದವು. ಈ ಹೊಸ ಚಿಗುರುಗಳಂತೆಯೇ ಹೊಸ ಯುಗಕ್ಕೆ ಸ್ವಾಗತ ಮಾಡುವ ಪವಿತ್ರ ದಿನವೇ ಯುಗಾದಿ.
ಯುಗಾದಿಯ ಹಿನ್ನಲೆ
ನಮ್ಮ ಪೂರ್ವಜರು ಕಾಲಗಣನೆಯಲ್ಲಿ ವಿಶೇಷ ನಿಪುಣರಾಗಿದ್ದರು. ಹಿಂದೂ ಕಾಲಗಣನೆಯ ಪ್ರಕಾರ, ಯುಗಾದಿಯು ಚಾಂದ್ರಮಾನ ವರ್ಷಕ್ಕೆ ಪ್ರಾರಂಭವಾಗುವ ಮಹತ್ತರ ದಿನ. “ಯುಗ” ಎಂದರೆ ಒಂದು ಕಾಲಘಟ್ಟ, “ಆದಿ” ಎಂದರೆ ಆರಂಭ. ಆದ್ದರಿಂದ, ಯುಗಾದಿ ಎಂದರೆ ಹೊಸ ಯುಗದ ಆರಂಭ. “ಋತೂನಾಂ ಕುಸುಮಾಕರ:” ಎಂಬ ಭಗವದ್ಗೀತೆಯ ವಾಣಿಯಂತೆ ಋತುಗಳರಾಜ “ವಸಂತನ” ಶುಭಾಗಮದ ದಿನವೆ “ಯುಗಾದಿ”.
“ಚೈತ್ರೇ ಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇಹನಿ!
ಶುಕ್ಲ ಪಕ್ಷೇ ಸಮಗ್ರಂತು, ತದಾ ಸೂರ್ಯೋದಯೇ ಸತಿ!!
ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆ ದಿನ ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಆ ದಿನವೇ ಗ್ರಹ- ನಕ್ಷತ್ರ- ಮಾಸ- ಋತು- ವರ್ಷಾಧಿಪತಿಗಳನ್ನೂ ಸೃಷ್ಟಿಸಿ ಕಾಲಗಣನೆ ಆರಂಭಿಸಿದ. ಹಿಂದೂಗಳಿಗೆ “ಯುಗಾದಿ” ಯುಗದ ಆದಿಯ ದಿನ. ಈ ಹಬ್ಬ ಯಾವ ವಾರ ಬರುತ್ತದೆಯೋ ಆ ವಾರಾಧಿಪತಿ ಆ ವರ್ಷದ ರಾಜ ಭಾನುವಾರ ಬಂದರೆ “ರವಿ” ಅಂದರೆ “ಸೂರ್ಯ” ವರ್ಷದ ರಾಜನಾಗುತ್ತಾನೆ. ವರ್ಷದ ಆರಂಭದ ಸ್ಥಿತಿಯಲ್ಲಿ ಪೂರ್ತಿ ವರ್ಷದ ಸುಖ ದುಃಖದ ಪ್ರತೀಕವೆಂದು ಭಾವಿಸಿ ವರ್ಷ ಫಲವನ್ನು ಹೇಳುತ್ತಾರೆ. ಪುರಾಣಗಳ ಪ್ರಕಾರ ಕ್ರಿ, ಶ, 5ನೇ ಶತಮಾನದಲ್ಲಿದ್ದ ಪ್ರಸಿದ್ಧ ಖಗೋಳ ವಿಜ್ಞಾನಿ “ವರಾಹಮಿಹಿರಾ ಚಾರ್ಯರು” ಚೈತ್ರ ಶುದ್ಧ ಪಾಡ್ಯ ಹೊಸ ವರ್ಷವೆಂದು ದೃಢಪಡಿಸಿದ್ದಾರೆ. ಈ ಹಬ್ಬದ ಮಹತ್ವವನ್ನು 12ನೇ ಶತಮಾನದ ಗಣಿತಜ್ಞ ಭಾಸ್ಕರಾಚಾರ್ಯರು ತತ್ವಶಾಸ್ತ್ರದ ಮೂಲಕ ವಿಶದಪಡಿಸಿದರು. ಪುರಾಣಗಳಲ್ಲಿ, ಈ ದಿನವೇ ಬ್ರಹ್ಮದೇವನು ಈ ಬ್ರಹ್ಮಾಂಡವನ್ನು ಸೃಷ್ಟಿಸಲು ಆರಂಭಿಸಿದನು ಎಂಬ ನಂಬಿಕೆ ಇದೆ.
ಯುಗಾದಿಯ ವಿಶೇಷತೆ ಮತ್ತು ಆಚರಣೆಗಳು
✔ ಎಣ್ಣೆ ಸ್ನಾನ: ಇದು ದೇಹದ ಶುದ್ಧೀಕರಣಕ್ಕೆ ಮಾತ್ರವಲ್ಲ, ಮನಸ್ಸಿನ ಪುನರ್ಜನ್ಮಕ್ಕೂ ಸಂಕೇತವಾಗಿದೆ.
✔ ಮನೆಯ ಅಲಂಕಾರ: ಮಾವಿನ ಎಲೆಗಳಿಂದ ಮನೆ ಅಲಂಕರಿಸುವುದು ಸಮೃದ್ಧಿಯನ್ನು ಆಹ್ವಾನಿಸುವ ಸಂಕೇತವಾಗಿದೆ.
✔ ಪಂಚಾಂಗ ಶ್ರವಣ: ಹೊಸ ವರ್ಷ ಹೇಗಿರಬಹುದು ಎಂಬ ಭವಿಷ್ಯವನ್ನು ಜ್ಯೋತಿಷಿಗಳು ವಿವರಿಸುತ್ತಾರೆ.
✔ ನೂತನ ವಸ್ತ್ರಧಾರಣೆ: ಜನರು ಹೊಸ ಬಟ್ಟೆ ಧರಿಸಿ, ದೇವರ ದರ್ಶನ ಮಾಡುತ್ತಾರೆ.
✔ ಪರಸ್ಪರ ಶುಭಾಶಯ ವಿನಿಮಯ: ಸ್ನೇಹಿತರು, ಬಂಧುಗಳು ಯುಗಾದಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಬೇವು–ಬೆಲ್ಲದ ತತ್ವ
ಕವಿ ಕುವೆಂಪುರವರ ವಾಣಿಯಂತೆ: “ಜೀವನವೆಲ್ಲ ಬೇವು ಬೆಲ್ಲ, ಬಲ್ಲವರೆಲ್ಲ ಬಲ್ಲಿದರೆಲ್ಲ, ಕಷ್ಟ ಸುಖ- ಸಿಹಿ ಕಹಿ ಸಮವೆಲ್ಲ, ಕಷ್ಟ ಸುಖ- ಸಿಹಿ ಕಹಿ ಸಮವೆಲ್ಲ ಯುಗಾದಿಯ ದಿನ ಅತ್ಯಂತ ವಿಶಿಷ್ಟ ಆಚರಣೆಯೆಂದರೆ ಬೇವು–ಬೆಲ್ಲ ತಿನ್ನುವುದು. ಬೇವು ➝ ಕಹಿ ರುಚಿಯ ಪ್ರತೀಕ, ಜೀವನದ ಕಠಿಣ ಅನುಭವಗಳನ್ನು ಸೂಚಿಸುತ್ತದೆ. ಬೆಲ್ಲ ➝ ಸಿಹಿ ಜೀವನದ ಸಾಂತ್ವನ, ಸಂತೋಷದ ಸಂಕೇತವಾಗಿದೆ. ಇವೆರಡನ್ನೂ ಒಟ್ಟಿಗೆ ಸೇವಿಸುವುದು ➝ ಜೀವನದ ಸಿಹಿ–ಕಹಿ ಕ್ಷಣಗಳನ್ನು ಸಮಭಾವದಿಂದ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುತ್ತದೆ.
ಯುಗಾದಿಯ ಪಾಠ ನಮ್ಮ ಮಕ್ಕಳಿಗೆ
ನಮ್ಮ ಮಕ್ಕಳು ಯುಗಾದಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ನಾವು ವಾಸಿಸುವ ಭೂಮಿ ಧರ್ಮ ಕ್ಷೇತ್ರವು ಹೌದು ಕರ್ಮ ಕ್ಷೇತ್ರವು ಹೌದು ನಮ್ಮ ಒಳಿತಿಗಾಗಿ ಸುಖ ಸಂತೋಷಕ್ಕಾಗಿ ಸಂಘಟನೆಗಾಗಿ ಬಂಧು ಬಾಂಧವ ಮಿತ್ರರೊಂದಿಗೆ ಬೆರೆಯಲು ಇಂತಹ ಹಲವು ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಬಂದಿದ್ದೇವೆ.
ಹೊಸ ಯುಗವನ್ನು ಸ್ವಾಗತಿಸುವುದು ಮಾತ್ರವಲ್ಲ, ಜೀವನದಲ್ಲಿ ಬರುವ ಸವಾಲುಗಳನ್ನೂ ಸ್ವೀಕರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಪೌರಾಣಿಕ, ವೈಜ್ಞಾನಿಕ ಹಾಗೂ ಮಾನವೀಯ ದೃಷ್ಟಿಕೋನಗಳಿಂದ ಈ ಹಬ್ಬವು ನಮ್ಮ ಜೀವನಕ್ಕೊಂದು ದಾರಿದೀಪವಾಗಬೇಕು.
ನಮ್ಮ ಸಂಸ್ಕೃತಿ ಮತ್ತು ಪ್ರಕೃತಿಯ ಸಂಭ್ರಮ
ನಮ್ಮ ಸಂಸ್ಕೃತಿಯು ಪೋಷಿತವಾಗಬೇಕಾದರೆ, ಹಬ್ಬಗಳ ಮೂಲಾರ್ಥ ಮಕ್ಕಳಿಗೆ ತಿಳಿಯಬೇಕು. ಯುಗಾದಿ ಹಬ್ಬವು ಪ್ರಕೃತಿಯ ಹೊಸತನವನ್ನು ತಲುಪಿಸುವ ಸಂದೇಶವನ್ನು ನೀಡುತ್ತದೆ.
ಚಿಗುರುವ ಹಸಿರು ಎಲೆಗಳು ➝ ಹೊಸ ಯುಗದ ಉದಯ. ಹಸನ್ಮುಖ ಹಕ್ಕಿಗಳ ಹಾಡು ➝ ಸಂತಸದ ಸಂಕೇತ. ಮಡಿಲಲ್ಲಿ ಸುಗ್ಗಿಯ ಸಂತಸ ➝ ಸಮೃದ್ಧ ಜೀವನ. ಬೇವು–ಬೆಲ್ಲದ ಸಿದ್ಧಾಂತ ➝ ಸಮಾನತೆ ಮತ್ತು ಜೀವನದ ಎಲ್ಲ ಅನುಭವಗಳ ಸ್ವೀಕಾರ.
ಯುಗಾದಿಯ ಸಂದೇಶ
ನಾವೆಲ್ಲರೂ ಹೊಸ ಯುಗಕ್ಕೆ ಕಾಲಿಡುವ ಹೊತ್ತಾಗಿದೆ. ಹಳೆಯದನ್ನು ಹಿಂದಿಕ್ಕಿ, ಹೊಸ ಬದುಕನ್ನು ರೂಪಿಸೋಣ.
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಬಾಶಯಗಳು!
ಸರ್ವೇ ಜನಾಃ ಸುಖಿನೋ ಭವಂತು,
ಸಮಸ್ತ ಸನ್ಮಂಗಳಾನಿ ಭವಂತು!