ನನ್ನ ಪೂರ್ಣ ಚೇತನ – ಪರಿಪಕ್ವತೆಯ ಪಸರಿಸುವ ದೀಪ!
ನಾನು ಯುಗನ್, ನನ್ನ ಪೂರ್ಣ ಚೇತನ ಶಾಲೆ ಮೈಸೂರಿನ ಅತ್ಯುತ್ತಮ ಶಾಲೆ ಎಂದರೆ ತಪ್ಪಲ್ಲ. ಇಲ್ಲಿ ನಾವು ಧೈರ್ಯ, ವಿಶ್ವಾಸ ಮತ್ತು ಪ್ರಾಮಾಣಿಕತೆ ಎಂಬ ಮಹತ್ವದ ಗುಣಗಳನ್ನು ಹೃದಯಕ್ಕೆ ಹತ್ತಿರವಾಗಿ ಕಲಿಯುತ್ತಿದ್ದೇವೆ.
ಈ ನಮ್ಮ ಶಾಲೆಯ ವಿಶೇಷತೆಯೆಂದರೆ ಭಗವದ್ಗೀತೆ ಪಠಣ! ಪ್ರತಿದಿನವೂ ನಾವು ಇದನ್ನು ಕೇಳಿ, ಮನನ ಮಾಡುತ್ತಾ, ಜೊತೆಗೆ ಜೀವನದ ಪಾಠಗಳನ್ನು ಕಲಿಯುತ್ತೇವೆ. ನಮ್ಮ ಶಿಕ್ಷಕರು ಮಿತ್ರತ್ವ ಮತ್ತು ಪ್ರೀತಿಯ ನೆರಳಿನಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಾ ನಮ್ಮನ್ನು ಪ್ರೋತ್ಸಾಹಿಸುತ್ತಾರೆ, ನಮ್ಮ ಬೆಳವಣಿಗೆಗೆ ಪೋಷಕರಂತೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇನ್ನು ನಮ್ಮ ಶಾಲೆಯ ಪ್ರಕೃತಿಯಂತೂ – ಮನಸ್ಸಿಗೆ ಮಧುರ ಸಂಗೀತ! ಹಸಿರು ಮರಗಳು, ಪಕ್ಕದಲ್ಲಿ ಹರಿಯುವ ತೊರೆ, ಧ್ಯಾನದ ದೇಗುಲ ಎಲ್ಲವೂ ಮನಸ್ಸಿಗೆ ಆಹ್ಲಾದ ಮತ್ತು ಆನಂದವನ್ನು ಉಂಟುಮಾಡುತ್ತವೆ. ಮಕ್ಕಳ ಆನಂದದ ನಗುವಿನ ನಡುವೆಯೇ, ಶಿಕ್ಷಕರು ಅಕ್ಕರೆಯಿಂದ, ಕಾಳಜಿಯಿಂದ ಪಾಠ ಕಲಿಸುತ್ತಾರೆ.
ನಾವು ನಮ್ಮ ಸ್ನೇಹಿತರು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತೇವೆ, ಒಗ್ಗಟ್ಟಾಗಿ ಕಲಿಯುತ್ತಿದ್ದೇವೆ. ಇಲ್ಲಿ ಎಲ್ಲ ಮಕ್ಕಳು ಹೂವಿನಂತೆ ಅರಳಿ, ತಾರೆಯಂತೆ ಮಿನುಗಿ ಭವಿಷ್ಯದ ಭಾರತವನ್ನು ಬೆಳಗಿಸಲು ಸಿದ್ದರಾಗುತ್ತಿದ್ದಾರೆ. ಹಾಗೆ ನಮ್ಮ ಶಾಲೆ, ವಿಶ್ವ ದಾಖಲೆ ನಿರ್ಮಿಸಿದ್ದು ನಮಗೆಲ್ಲರಿಗೂ ಹೆಮ್ಮೆ! ಆ ದಿನ ಮಳೆ ಸುರಿದರೂ, ನಮ್ಮ ಉತ್ಸಾಹ ಕುಗ್ಗಲಿಲ್ಲ! ಎಲ್ಲರೂ ಶ್ರದ್ಧೆಯಿಂದ, ದೇವರ ಮೊರೆ ಹೋಗಿ, ವಿಶ್ವ ದಾಖಲೆ ಮಾಡಿಯೇ ಬಿಟ್ಟೆವು!
ನಮ್ಮ ಶಾಲೆಯಲ್ಲಿ ಕಲಿಯುವುದಕ್ಕೆ ಸಾಗರದಷ್ಟು ವಿದ್ಯೆ ಇದೆ! ಇಲ್ಲಿ ನಾವು ಕಲಿಯುತ್ತಾ, ಆನಂದಿಸುತ್ತಾ, ಸ್ನೇಹ ಜೀವಿಗಳಂತೆ ಬದುಕುತ್ತಿದ್ದೇವೆ. ಒಟ್ಟಾರೆ ನಮ್ಮ ಶಾಲೆಯ ಶಿಕ್ಷಣ, ನಮ್ಮ ಭವಿಷ್ಯಕ್ಕೆ ದೀಪದಂತೆ ಬೆಳಕು ನೀಡುತ್ತಿದೆ.