ಕರಾಳ ಮುಖದ ಅಂತಃಕರಣ
ಬೆಳಗಿನ ಜಾವದ ಹಕ್ಕಿಯ ಚಿಲಿಪಿಲಿಯೊಂದಿಗೆ ಪ್ರತಿದಿನ ಶುರುವಾಗುವ ಸುಜಾತಳ ಬದುಕು ಇಳಿ ಸಂಜೆಯವರೆಗೂ ಸಮಯ ಸಾಗುವುದೇ ತಿಳಿಯದ ಹಾಗೆ ದುಡಿವ ಗಾಣದ ಎತ್ತಿನಂತೆ ಸಾಗುತ್ತಿತ್ತು. ಸುಜಾತ ಮೈಸೂರಿನ ಅರಣ್ಯ ಇಲಾಖೆಯಲ್ಲಿ ಟೈಪಿಸ್ಟ್ ಆಗಿದ್ದಳು. ಅವಳದೇ ಆದ ಚಿಕ್ಕ ಮತ್ತು ಚೊಕ್ಕದಾದ ಸಂಸಾರ. ತನ್ನ ಗಂಡ ಮತ್ತು 2 ಸುಂದರವಾದ ಹೆಣ್ಣು ಮಕ್ಕಳೊಂದಿಗೆ ಚಿಕ್ಕದಾದ ಸಂಸಾರವನ್ನು ತೂಗುತ್ತಿದ್ದಳು. ಸುಜಾತಾಳ ಬದುಕು ಮತ್ತು ಭಾವನೆ ತನ್ನ ಕುಟುಂಬಕ್ಕೆ ಮಾತ್ರ ಮೀಸಲಾಗಿತ್ತು, ತನಗಾಗಿ ಏನನ್ನು ಮಾಡಿಕೊಳ್ಳದೆ, ಸಂಸಾರದ ಹೆಚ್ಚಿನ ಜವಾಬ್ದಾರಿ ಹೊತ್ತು, ಮಕ್ಕಳ ಮೇಲೆ ಅಗಾಧ ಕನಸು ಕಂಡಂತಹ ಜೀವಿ ಆಕೆ. ಎಂದಿನಂತೆ ಆ ದಿನವು ಬೆಳಗಿನ ಜಾವದ ಕೆಲಸಕ್ಕೆ ತಯಾರಿ ಮಾಡಿಕೊಂಡಿದ್ದಳು ಹಾಗೆ ಸುಜಾತಾಳ ಪತಿಯು ಆ ದಿನದ ಪತ್ರಿಕೆಯನ್ನು ಓದಿದ ನಂತರ ಅಲ್ಲಿನ ಪ್ರಮುಖ ಸುದ್ದಿಯನ್ನು ಸುಜಾತಾಳಿಗೆ ಹೇಳಿದಾಗ.. ಸುಜಾತಾಳ ಮನಸ್ಸು ಒಮ್ಮೆಲೇ ತನ್ನ ಜೀವನದಲ್ಲಿ ಹಿಂದೆ ನಡೆದ ಘಟನೆಯೊಂದಕ್ಕೆ ಹಾದು ಹೋಯಿತು.
ಕರ್ತವ್ಯ ಸೇವೆಯ ಅವಧಿ 25 – 26 ವರ್ಷ ಮುಗಿಯಲು ಬಂದಿತ್ತು, ಆದರೆ ನೆನಪಿನ ಬುತ್ತಿಯಲ್ಲಿ ಮಾತ್ರ ಇಪ್ಪತ್ತು ವರ್ಷಗಳ
ಹಿಂದಿನ ದಿನದ ನೆನಪು ಆಕಾಶಬುಟ್ಟಿಯಂತೆ ತೇಲಿ ಬಂತು. ಸುಜಾತ ಮೈಸೂರಿಗೆ ಕೆಲಸಕ್ಕೆ ಸೇರುವ ಮುನ್ನ ಕರ್ತವ್ಯದಲ್ಲಿ
ಇದ್ದಿದ್ದು ಅಲ್ಲಿ ಕರ್ತವ್ಯ ಮಾಡುವಾಗ ಸುಜಾತರಿಗೆ ಒಂದು ಹೆಣ್ಣು ಮಗು ಜನನವಾಗಿತ್ತು. ಪತಿಯು ಖಾಸಗಿ ಕಾರ್ಖಾನೆ
ಒಂದರಲ್ಲಿ ಉದ್ಯೋಗಿಯಾಗಿದ್ದರು. ಜೀವನ ಭದ್ರ ಪಡಿಸಲು ಇಬ್ಬರು ದುಡಿಯುವ ಅನಿವಾರ್ಯತೆ. ಮಗುವನ್ನು ಬೆಳಗಿನ
ಹೊತ್ತು ಶಿಶುವಿಹಾರದಲ್ಲಿ ಬಿಟ್ಟು ಇಬ್ಬರು ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.
ತಾಯಿ ಜೀವಕ್ಕೆ ತನ್ನ ಕರ್ತವ್ಯಕ್ಕೆ ಬಂದಾಗ ತನ್ನ ಮುದ್ದು ಮಗುವಿನ ಯೋಚನೆ ಸದಾ ಕಾಡುತ್ತಿತ್ತು. ಚಿಕ್ಕ ಮಗುವನ್ನು ಯಾರದೋ ಮಡಿಲಿಗೆ ಹಾಕಿ ಬರುತ್ತಿದ್ದ ಳು. ಪ್ರತಿದಿನ ಅವಳಿಗೆ ಕರ್ತವ್ಯ ಮುಗಿಸಿ ಮನೆಗೆ ಬೇಗ ತೆರಳಬೇಕೆಂಬ ಹಂಬಲ. ಮೈಸೂರಿನಲ್ಲಿ ವಾಸವಿದ್ದ ಸುಜಾತಳು ಪ್ರತಿದಿನ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಸಂಜೆ ಅವಳ ಪತಿ ದ್ವಿಚಕ್ರವಾಹನದಲ್ಲಿ ಮಗುವನ್ನು ಶಿಶುವಿಹಾರದಿಂದ ಕರೆದುಕೊಂಡು ಬಂದು ಮೈಸೂರಿನ ಗನ್ ಹೌಸ್ ಬಳಿ ಕಾಯುತ್ತಿದ್ದರು. ಸುಜಾತ ಚಿಕ್ಕಮಗು ಮತ್ತು ಗಂಡನನ್ನು ಬೇಗ ಸೇರಲು ತವಕಿಸುತ್ತಿದ್ದ ದಿನಗಳು ಅವು. ಪ್ರತಿದಿನ ಸಂಜೆ ಸುಜಾತ ಬಸ್ಸು ಹತ್ತಲು ಸ್ವಲ್ಪ ದೂರ ದಾರಿ ನಡಿಗೆಯನ್ನು ಸವೆಸಬೇಕಿತ್ತು. ಹಳ್ಳಿ ಹೋಕರು ಅಥವಾ ದಾರಿಯಲ್ಲಿ ಕೈಯಡ್ಡ ಹಾಕಿದರೆ ಅಲ್ಲಿಯ ಜನ ಬಸ್ಟಾಪ್ಗೆ ಬಿಡುವುದು ಅಲ್ಲಿ ಮಾಮೂಲಿಯಾಗಿತ್ತು.
ಸುಜಾತಳು ಸಹ ಹಾಗೆ ಕೈ ಅಡ್ಡ ಹಾಕಿ ದಾರಿ ಹೋಕರ ಜೊತೆ ಬಸ್ ಸ್ಟಾಪ್ ಗೆ ತೆರಳುತ್ತಿದ್ದಳು ಇದನ್ನು ಗಮನಿಸಿದ್ದ ಅವಳ ಸಹೋದ್ಯೋಗಿಗಳು ಬಹಳ ಸಲ ಹೇಳಿದ್ದರು ನಾವು ಸಹ ಜೊತೆ ಬರುತ್ತೇವೆ ಒಂದೆರಡು ನಿಮಿಷದೊಳಗೆ ಏಕೆ ಓಡುತ್ತೀಯೆ? ಯಾವಾಗಲೂ ಒಳ್ಳೆಯ ಜನರೇ ಸಿಗುವರೆ? ಎಂದು ಎಚ್ಚರಿಸುತ್ತಿದ್ದರು. ಅವಳಿಗೆ ತನ್ನ ಮಗು ತಾಯಿ ಇಲ್ಲದೆ ಬಹಳ ಹೊತ್ತು ಕಾಲ ಕಳೆದಿರುತ್ತೆ ಎಂಬುದರ ಮುಂದೆ ಸಹೋದ್ಯೋಗಿಗಳ ಬುದ್ಧಿ ಮಾತು ತಲೆಗೆ ಹೋಗುತ್ತಿರಲಿಲ್ಲ.
ಹೀಗೆ ಒಂದು ದಿನ ಸಂಜೆ ಕಾರ್ಮೋಡ ಕವಿದ ವಾತಾವರಣ ಮಳೆಯಲ್ಲಿ ನಿಂತರೆ ತಡವಾಗುತ್ತದೆ ಎಂಬ ಆತಂಕ ಅವಳನ್ನು ಬಹಳ ಕಾಡಿತ್ತು ಆದ್ದರಿಂದ ರಸ್ತೆಯಲ್ಲಿ ಸಿಗುವ ಯಾವುದಾದರೂ ಗಾಡಿಗೆ ಕೈ ಅಡ್ಡ ಹಾಕಿ, ಬಸ್ಸು ಹಿಡಿದು ಬಿಡಬೇಕೆಂಬ ಅವಳ ಯೋಚನೆ ಆಫೀಸು ಬಿಟ್ಟಾಗಿಂದಲೂ ಅಂದುಕೊಂಡು ಜೋರು ನಡಿಗೆ ಆರಂಭಿಸಿದಳು. ಅಂದು ಮಳೆ ಹನಿಯ ಆರಂಭ ಬೇರೆ, ಯಾವುದೇ ದ್ವಿಚಕ್ರವಾಹನಗಳ ಸುಳಿವಿರಲಿಲ್ಲ ನಿಲ್ಲಬಾರದೆಂಬ ಅವಳ ಧ್ಯೇಯ ಕಾಲಿಗೆ ಜೋರು ಕೆಲಸ ಕೊಟ್ಟಿತ್ತು ಹಿಂದಿನಿಂದ ಕಾರ್ ಒಂದು ಬರುವ ಸದ್ದು ಸುಜಾತಾಳಿಗೆ ಕೇಳಿಸಿ ಕೈ ಅಡ್ಡ ಹಾಕಿದಳು ಬೂದು ಬಣ್ಣದ ಅಂಬಾಸಿಡರ್ ಕಾರು ವೇಗವಿದ್ದ ಕಾರಣ ಕೊಂಚ ಮುಂದೆ ಸರಿದು ನಿಲ್ಲಿತು. ಕಾರು ನಿಂತಿದ್ದು ಸುಜಾತಾಳಿಗೆ ಆನಂದವಾಗಿ ಮುಂದೆ ನಾಲ್ಕು ಹೆಜ್ಜೆ ಹಾಕಿ ಕಾರಿನ ಬಾಗಿಲು ತೆಗೆದ ಕಾರಣ ಕೂತುಬಿಟ್ಟಳು ಭದ್ರವಾಗಿ ಬಾಗಿಲು ಹಾಕಿ ಎಂದು ಪಕ್ಕದಲ್ಲಿದ್ದ ಆ ಡ್ರೈವರ್ ಅರೆಬರೆ ತಮಿಳ್ ಮಿಶ್ರಿತ ಕನ್ನಡದಲ್ಲಿ ನುಡಿದ. ಬಾಗಿಲು ಹಾಕಿಕೊಂಡ ಆಕೆಗೆ ಕೊಂಚ ನಿರಾಳವಾಯಿತು. ತಲೆಯಲ್ಲಿ ಏನೋ ಸಾಧಿಸಿದ ಭಾವ. ಮಳೆಗೆ ಸಿಕ್ಕಿಹಾಕಿಕೊಳ್ಳದೆ, ಕಾರು ಹತ್ತಿದ ಅವಳಿಗೆ ಏನೋ ಗೆಲುವು ಸಾಧಿಸಿದಂತೆ, ನಿಟ್ಟುಸಿರು ಬಿಟ್ಟು ಆಕೆ ಕಿಟಕಿಯಿಂದ ಬರುತ್ತಿದ್ದ ತಣ್ಣನೆ ಹವೆಯನ್ನು ಅನುಭವಿಸುವ ಮೊದಲೇ ಹಿಂದಿನಿಂದ ಗಡಸು ಧ್ವನಿಯಲ್ಲಿ ಯಾವ ಕಡೆ ಎಂದು ಕೇಳಿದ ಸದ್ದಿಗೆ ಸಣ್ಣ ಧ್ವನಿಯಲ್ಲಿ ಮೈಸೂರಿನ ಕಡೆಗೆ ಎಂದು ಹೇಳಿಳು ಸುಜಾತ. ಡ್ರೈವರ್ ಕಡೆ ತಿರುಗಿದಾಗ ದಪ್ಪ ಮೀಸೆ ಕಪ್ಪು ಬಣ್ಣ ಹಣೆಯಲ್ಲಿ ವಿಭೂತಿ ನೋಡಿ ತಮಿಳುನಾಡಿನವರು ಎಂದು ಸ್ಪಷ್ಟವಾಯಿತು ಮತ್ತು ಅವಳಿಗೆ ಅರಿವಾದ ವಿಷಯ ಆಗ ಕಾರಿನಲ್ಲಿ ಹಿಂದೆ ಮೂವರು ಗಂಡಸರು ಮತ್ತು ಡ್ರೈವರ್ ತಾನು ಒಬ್ಬಳೇ ಹೆಂಗಸು ಎಂಬುದು. ಕೊಂಚ ಅಳಕು ಮತ್ತು ಭಯ ಎರಡೆರಡು ಒಟ್ಟಿಗೆ ಆಗಿ ಸೆರಗು ಗಟ್ಟಿಯಾಗಿ ಹಿಡಿದುಕೊಂಡಳು.
ಅದನ್ನು ಗಮನಿಸಿದ ಹಿಂದಿನ ವ್ಯಕ್ತಿ ನೀನು ಭದ್ರವಾಗಿ ಮೈಸೂರಿನ ದಾರಿ ಹಿಡಿಯುವೆ ಭಯ ಬೇಡ ಎಂಬ ಗಡಸು ಧ್ವನಿ ಹಿಂದಿನಿಂದ ಬಂತು. ಕೊಂಚ ಮನಸ್ಸಿಗೆ ನಿರಾಳ, ಆದರೂ ಭಯ. ಆ ಮಳೆ ಗಾಳಿಯಲ್ಲಿ ಆಕೆಗೆ ಸೆಕೆಯ ಅನುಭವವಾಯಿತು. ಹಿಂದೆ ತಿರುಗಿ ನೋಡಲು ಸಹ ಸುಜಾತ ಧೈರ್ಯ ಮಾಡಲಿಲ್ಲ ಕಾರು ವೇಗವಾಗಿ ಮೈಸೂರಿನ ದಾರಿ ಹಿಡಿದಿತ್ತು ಆ ಪ್ರಯಾಣದಲ್ಲಿ ಯಾರು ಏನನ್ನು ಮಾತನಾಡಿರಲಿಲ್ಲ
ಗಾಡಿ ಕೊಂಚ ಸಮಯದಲ್ಲೇ ಮೈಸೂರು ಸೇರಿತ್ತು ಡ್ರೈವರ್ ಸುಜಾತರಿಗೆ ನೀವು ಇಳಿಯಿರಿ ಎಂದ. ಎಚ್ಚೆತ್ತ ಸುಜಾತ ಕಾರಿಳಿದು ಪರ್ಸಿನಿಂದ ಹಣ ತೆಗೆಯುವಷ್ಟರಲ್ಲಿ ಬೂದು ಬಣ್ಣದ ಕಾರು ವೇಗವಾಗಿ ಚಲಿಸಿ ಕಣ್ಮರೆಯಾಗಿತ್ತು ಆದರೆ ಸುರಕ್ಷಿತವಾಗಿ ಮಳೆಯಲ್ಲಿ ಊರು ಸೇರಿದ್ದು ಆಕೆಗೆ ನಿರಾತಂಕವಾಯಿತು.
ಆದರೆ ಆಕೆಗೆ ಬರ ಸಿಡಿಲಿನಂತೆ ಒಂದು ಸುದ್ದಿ ಮಾರನೆಯ ಬೆಳಗ್ಗೆ ಪತ್ರಿಕೆಯಲ್ಲಿ ಕಾದಿತ್ತು. ಅದೇನೆಂದರೆ, ಕಾಡುಗಳ್ಳ ದಂತ ಚೋರ ವೀರಪ್ಪನ್ ಮತ್ತು ಸಂಗಡಿಗರು ನೆನ್ನೆ ನಂಜನಗೂಡು ಮತ್ತು ಮೈಸೂರಿನ ಸುತ್ತಮುತ್ತ ಬೂದು ಬಣ್ಣದ ಕಾರಿನಲ್ಲಿ ಓಡಾಡಿದ್ದಾರೆ ಎಂಬುದು ಸುಜಾತಾಳನ್ನು ನಿಂತ ನೆಲ ಬಿರುಕು ಮಾಡಿದಷ್ಟು ಅನುಭವವಾಗಿ ತರಗೆಲೆಯಂತಾಗಿದ್ದ ಆಕೆ ಆಫೀಸಿಗೆ ರಜೆ ಹಾಕಿದ್ದ ನೆನಪನ್ನು ಎಚ್ಚೆತ್ತಿಸಿದ್ದು ಮಾತ್ರ ಒಲೆ ಮುಂದಿನ ಕುಕ್ಕರಿನ ಸಿಳ್ಳೆ , ನೆನಪಿನ ಕೊಳಕ್ಕೆ ಮುಳುಗಲು ಕಾರಣ . ಅಂದು ಬಂದ ವೀರಪ್ಪನ್ ಸಾವಿನ ಸುದ್ದಿ, ಸುಜಾತಾಳ ಬದುಕಿನ ಒಂದು ಮರೆಯಲಾರದ ದಿನವನ್ನು ನೆನಪಿಸಿತ್ತು.
ತಾಯಿಯ ಮಮತೆ, ಕರ್ತವ್ಯಪರತೆ ಮತ್ತು ಧೈರ್ಯವು ಬದುಕಿನಲ್ಲಿ ಕಠಿಣ ಸಂದರ್ಭಗಳಲ್ಲಿಯೂ ದಾರಿದೀಪವಾಗುತ್ತವೆ. ಕೆಲವೊಮ್ಮೆ ಅಪರಾಧಿಗಳಲ್ಲಿಯೂ ಮಾನವೀಯತೆ ಮಿಂಚಬಹುದು ಎಂಬುದು ಜೀವನದ ವಿಚಿತ್ರ ಸತ್ಯ. ಸನ್ನಿವೇಶ ಏನೇ ಆಗಿರಲಿ, ಧೈರ್ಯ ಮತ್ತು ಪ್ರೀತಿ ನಮ್ಮ ನಿಜವಾದ ಶಕ್ತಿ.
“ಈ ಕಥೆ, ನನ್ನ ಕುಟುಂಬದೊಂದರ ಬದುಕಿನಲ್ಲಿ ಸಂಭವಿಸಿದ ನೈಜ ಘಟನೆಯ ಆಧಾರಿತ. ಇದು ನಿಜ ಜೀವನದಲ್ಲಿ ತಾಯಿಯ ಧೈರ್ಯ, ಮಮತೆ ಮತ್ತು ಅಪರೂಪದ ಅನುಭವಗಳ ಪ್ರತಿಬಿಂಬವಾಗಿದೆ. ನನ್ನ ಬರವಣಿಗೆಯ ಮೂಲಕ ಈ ಪ್ರಸಂಗವನ್ನು ಹಂಚಿಕೊಳ್ಳುವುದು ಒಂದು ಪ್ರಾಮಾಣಿಕ ಪ್ರಯತ್ನ — ಓದುಗರ ಹೃದಯವನ್ನು ತಲುಪಲೆಂಬ ಆಶಯದೊಂದಿಗೆ.”